ಬೈಂದೂರು: ಮರವಂತೆಯ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಪ್ರತಿ 3 ವರ್ಷಕ್ಕೊಮ್ಮೆ ನಡೆಯುವ ಅಪರೂಪದ ಆಭಾರಿ ಸೇವೆ ಕಾರ್ಯಕ್ರಮ ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ವತಿಯಿಂದ ಸೋಮವಾರ ನಡೆಯಿತು.
ಆಭಾರಿ ಮಹೋತ್ಸವ ಅಂಗವಾಗಿ ಮಹಾರಾಜ ಸ್ವಾಮಿ ಶ್ರೀವರಾಹ ದೇವಸ್ಥಾನದ ಎದುರು ಭಾಗದಲ್ಲಿ ಸೌಪರ್ಣಿಕಾ ನದಿಯ ನೆಗಳನ (ಮೊಸಳೆ) ಗುಂಡಿಗೆ ಒಂದು ಮುಡಿ ಅಕ್ಕಿ ನೈವೇದ್ಯ ಸಮರ್ಪಣೆ ಮಾಡಲಾಯಿತು. 7 ಬುಟ್ಟಿಗಳಲ್ಲಿ ಒಟ್ಟು 56 ಸೇರು ಅಕ್ಕಿಯ ನೈವೇದ್ಯವನ್ನು ಮಂಗಳ ವಾದ್ಯಘೋಷದ ಮೂಲಕ ನೆಗಳನ ಗುಂಡಿಗೆ ಹಾಕಲಾಯಿತು. ಆಭಾರಿ ಸೇವೆಯ ಪ್ರಯುಕ್ತ ಬೆಳಿಗ್ಗೆ ಗಣಹೋಮ, ಚಂಡಿಕಾಹೋಮ, ವಿಷ್ಣು ಹೋಮ ಮತ್ತು ಮತ್ಯಾಕರ್ಷಣ ಹೋಮ, ಕಲಶಾಭಿಷೇಕ, ಮಹಾಪೂಜೆ ನಡೆಯಿತು.

ಬೆಳ್ಳಿ ರಥವನ್ನು ಎಳೆದು ದೇವರಿಗೆ ಸೇವೆಯನ್ನು ಸಮರ್ಪಿಸಲಾಯಿತು. ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ ಏಕಾದಶೀಯ ರುದ್ರಾಭಿಷೇಕ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಪುರೋಹಿತರ ನೇತೃತ್ವದಲ್ಲಿ ಸಂಪನ್ನಗೊಂಡಿತು.
ಮರವಂತೆಯ ಮೀನುಗಾರ ಸಮುದಾಯ ಮತ್ತು ನಾಡ ಹಡವು ಗ್ರಾಮಸ್ಥರ ಈ ಸೇವೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಪ್ರಕೃತಿ, ಜಲಚರ, ಜೀವಜಂತುಗಳಿಗೆ ಆಭಾರಿಯಾಗಿದ್ದೇವೆ ಎನ್ನುವ ಸಂದೇಶ ನೀಡುವ ಹಬ್ಬ ಹಾಗೂ ನೀರನ್ನೇ ನಂಬಿದ ಜನ ಇದೇ ನೀರಿನಲ್ಲಿರುವ ಜಲಚರಗಳಿಗೂ ಅನ್ನಾಹಾರ ನೀಡುವ ಮೂಲಕ ಕೃತಜ್ಞತೆ ಸಲ್ಲಿಸುವ ಉತ್ಸವದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು.
ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಸುಕ್ಷೇತ್ರ ನರಸೀಪುರದ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಜೇಶ ಹೆಬ್ಬಾರ್, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ನಾಗೇಶ ಖಾರ್ವಿ, ಮಾಜಿ ಅಧ್ಯಕ್ಷರಾದ ಆನಂದ ಖಾರ್ವಿ, ಕುಮಾರ್ ಖಾರ್ವಿ, ಗೌರವಾಧ್ಯಕ್ಷ ಮದನ ಕುಮಾರ್, ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜಶೇಖರ ಹೆಬ್ಬಾರ್, ಮರವಂತೆ ಶ್ರೀರಾಮ ಮಂದಿರ ಸೇವಾ ಸಮಿತಿ ಅಧ್ಯಕ್ಷ ಸುರೇಶ ಖಾರ್ವಿ, ಬೈಂದೂರು ವಲಯ ಹಸಿ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಉದಯ ಖಾರ್ವಿ, ಮೀನುಗಾರ ವಿವಿಧ ಸಂಘಟನೆಗಳ ಮುಖಂಡರಾದ ವಾಸುದೇವ ಖಾರ್ವಿ, ವೆಂಕಟರಮಣ ಖಾರ್ವಿ, ಯಶವಂತ ಖಾರ್ವಿ ಗಂಗೊಳ್ಳಿ, ನವೀನಚಂದ್ರ ಉಪ್ಪುಂದ, ರಾಮ ಖಾರ್ವಿ, ಮರವಂತೆ ಗ್ರಾಪಂ ಅಧ್ಯಕ್ಷ ನಾಗರಾಜ ಪಟಗಾರ್, ಮಹೇಂದ್ರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

