ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ ಉಪ್ಪುಂದ ಹಾಗೂ ರೈತಸಿರಿ-ರೈತ ಸೇವಾ ಒಕ್ಕೂಟ ಇವರ ಜಂಟಿ ಆಶ್ರಯದಲ್ಲಿ ನಿವೃತ್ತ ಶಾಖಾ ವ್ಯವಸ್ಥಾಪಕರಾದ ಚಂದ್ರ ಬಿ ನಾಗೂರು ಇವರ ಬೀಳ್ಕೊಡುಗೆ ಸಮಾರಂಭ ಮತ್ತು ರೈತ ಕೂಟದ ಮಾಸಿಕ ಸಭೆಯು ಸಂಘದ ರೈತಸಿರಿ ಸಭಾಭವನದಲ್ಲಿ ನಡೆಯಿತು.
ನಿವೃತ್ತರಾದ ಶ್ರೀ ಚಂದ್ರ ಬಿ ನಾಗೂರು ಇವರಿಗೆ ಅಧ್ಯಕ್ಷರು ,ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ವತಿಯಿಂದ, ಸಂಘದ ಸಿಬ್ಬಂದಿಗಳಿಂದ ಹಾಗೂ ನಿವೃತ ನೌಕರರಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿಯವರು ಮಾತಾನಾಡಿ ಸಹಕಾರಿ ಕ್ಷೇತ್ರದಲ್ಲಿ ಚಂದ್ರ ಬಿ ಇವರು ಜನಸ್ನೇಹಿಯಾಗಿ ವೃತ್ತಿ ಜೀವನದಲ್ಲಿ ಸದಾ ನಗುಮೊಗದಿಂದ ಕಾರ್ಯನಿರ್ವಹಿಸಿದ್ದಾರೆ. ಇವರ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭಹಾರೈಸಿದರು.
ನಿವೃತ್ತ ನೌಕರರಾದ ಕೆ.ಹಾವಳಿ ಬಿಲ್ಲವ ಹಾಗೂ ಸಂಘದ ಕೃಷಿ ಸಹಾಯಕರಾದ ಈಶ್ವರ ನಾಯ್ಕ ಇವರು ನಮ್ಮ ಸಂಘದಿಂದ ನಿವೃತ್ತರಾದ ಶಾಖಾ ವ್ಯವಸ್ಥಾಪಕರಾದ ಚಂದ್ರ ಬಿ ನಾಗೂರು ಇವರ ಆದರ್ಶಗಳು ಹಾಗೂ ಕರ್ತವ್ಯ ಪ್ರಜ್ಞೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ , ಅವರೊಂದಿಗಿನ ಕೆಲಸದ ಅನುಭವಗಳನ್ನು ಹಂಚಿಕೊಂಡರು.
ಬೈಂದೂರ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿಯಾದ ಶ್ರೀಮತಿ ಗಾಯತ್ರಿ ಇವರು ಕೃಷಿ ಇಲಾಖೆಯ ವಿವಿಧ ಸೌಲಭ್ಯಗಳು, ಪ್ರುಟ್ಸ್ ತಂತ್ರಾಂಶ ಕಡ್ಡಾಯ ನೊಂದಣಿ ಹಾಗೂ ರೈತರಿಂದ ಸ್ವಯಂ ಬೆಳೆ ಸಮೀಕ್ಷೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಮಂಜು ದೇವಾಡಿಗ, ನಿರ್ಧೇಶಕರಾದ ಮೋಹನ ಪೂಜಾರಿ, ಈಶ್ವರ ಹಕ್ಲತೋಡು, ಗುರುರಾಜ ಹೆಬ್ಬಾರ, ರಾಜೇಶ ದೇವಾಡಿಗ, ರಂಜಿತಕುಮಾರ ಶೆಟ್ಟಿ, ಹೂವಾ ನಾಯ್ಕ, ಲೀಲಾ ಪೂಜಾರ್ತಿ ,ರೈತ ಕೂಟದ ಸದಸ್ಯರು ,ನಿವೃತ ನೌಕರರ ಕುಟುಂಬದವರು ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ವಿಷ್ಣು ಪೈ ಎನ್ ಕಾರ್ಯಕ್ರಮ ನಿರ್ವಹಿಸಿದರು, ಸಿಬ್ಬಂದಿ ಅರುಣ ಗಾಣಿಗ ನಿವೃತ್ತರ ಪರಿಚಯ ವಾಚಿಸಿದರು,ಮಾರಾಟಾಧಿಕಾರಿಗಳಾದ ಚಂದಯ್ಯ ಶೆಟ್ಟಿ ಇವರು ಧನ್ಯವಾದಗೈದರು ಹಾಗೂ ಸಿಬ್ಬಂದಿವರ್ಗದವರು ಸಹಕರಿಸಿದರು.

