ಬೈಂದೂರು : ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ (ರಿ.) ಬೈಂದೂರು ತಾಲೂಕು ಇದರ ವತಿಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಜ್ಞಾನವಿಕಾಸ ಕಾರ್ಯಕ್ರಮ ಶನಿವಾರ ನಾಗೂರು ಒಡೆಯರಮಠ ಶ್ರೀ ಗೋಪಾಲಕೃಷ್ಣ ಕಲಾಮ0ದಿರದಲ್ಲಿ ನಡೆಯಿತು..
ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ಜಂಟಿ ಆಡಳಿತ ನಿರ್ದೇಶಕಿ ಅನುಪಮಾ ಎಸ್.ಶೆಟ್ಟಿ ಅವರು ಮಹಿಳಾ ವಿಚಾರಗೋಷ್ಠಿ ಜ್ಞಾನವಿಕಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಮಹಿಳೆಯರು ಎಷ್ಟು ಪ್ರಬಲರಾಗಿದ್ದಾರೆ ಎಂದರೆ ಜ್ಞಾನವಿಕಾಸ ಕಾರ್ಯಕ್ರಮದ ಮಹತ್ವ ಅಷ್ಟಿದೆ. ಮಾತೃಶ್ರೀ ಡಾ ಹೇಮಾವತಿ ವಿ.ಹೆಗ್ಗಡೆಯವರ ಕನಸಿನ ಕೂಸು ಈ ಜ್ಞಾನವಿಕಾಸ ಸಂಘ. ಮನೆ ಒಳಗೆ ಇರುವ ಮಹಿಳೆಯರು ಈಗ ಸಮಾಜದ ವ್ಯವಹಾರ ಜ್ಞಾನ ಹೊಂದಿದ್ದಾರೆ. ಇನ್ನು ಹೆಚ್ಚಿನ ರೀತಿಯಲ್ಲಿ ಜ್ಞಾನ ವಿಕಾಸ ಸಂಘಗಳು ಬೆಳೆಯಲಿ ಹಾಗೂ ಸ್ವ-ಸಹಾಯ ಸಂಘದ ಮೂಲಕ ಜ್ಞಾನ ಗಳಿಸಿದ್ದಾರೆ. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಅಪಾರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ರಾಷ್ಟ್ರೀಯ ತರಬೇತುದಾರೆ ಹಾಗೂ ಗಣಿತಶಾಸ್ತ್ರ ಉಪನ್ಯಾಸಕಿ ಡಾ.ಹರಿಣಾಕ್ಷಿ ಕರ್ಕೆರ್ ಮಾತನಾಡಿ, ಪ್ರತಿಯೊಬ್ಬ ಮಹಿಳೆಯು ತನ್ನಲ್ಲಿ ಒಂದಲ್ಲ ಒಂದು ಕೌಶಲ್ಯವನ್ನು ಹೊಂದಿರುತ್ತಾಳೆ, ಅದಕ್ಕೆ ಸರಿಯಾದ ಪ್ರೇರಣೆ ದೊರೆತಾಗ ಯಶಸ್ವಿ ಮಹಿಳೆಯಾಗಿ ಹೊರಹೊಮ್ಮಲು ಸಾಧ್ಯವಿದೆ, ಸ್ವ ಉದ್ಯೋಗ ಕ್ಕೆ ಪೂರಕವಾಗಿ ಹಲವಾರು ಅವಕಾಶಗಳು ಇದೆ ಅದನ್ನು ಮಹಿಳೆಯರು ಉಪಯೋಗಿಸಿಕೊಳ್ಳುವ ಸಾವಲಂಬಿ ಬದುಕಿಗೆ ಮುನ್ನುಡಿ ಇಡಬೇಕು ಎಂದರು.
ಧ.ಗ್ರಾ.ಯೋಜನೆ ಬೈಂದೂರು ತಾಲೂಕು ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ ಶಿರೂರು ಅಧ್ಯಕ್ಷತೆ ವಹಿಸಿದ್ದರು.
ಧ.ಗ್ರಾ.ಯೋಜನೆ ಕರಾವಳಿ ಪ್ರಾದೇಶಿಕ ವಿಭಾಗದ ನಿರ್ದೇಶಕ ಆನಂದ ಸುವರ್ಣ,ಬೈಂದೂರು ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ರಘುರಾಮ ಕೆ.ಪೂಜಾರಿ,ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ,ಕಿರಿಮಂಜೇಶ್ವರ ಗ್ರಾ.ಪಂ ಅಧ್ಯಕ್ಷ ಶೇಖರ ಖಾರ್ವಿ,ಬೈಂದೂರು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಚೈತ್ರ ಪಿ.ಯಡ್ತರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅತ್ಯುತ್ತಮ ಜ್ಞಾನ ವಿಕಾಸ ಕೇಂದ್ರಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಧ.ಗ್ರಾ.ಯೋಜನಾಧಿಕಾರಿ ಸಂಜಯ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಿರಿಮಂಜೇಶ್ವರ ವಲಯ ಮೇಲ್ವಿಚಾರಕ ಭರತ್ ಹಾಗೂ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುರೇಖಾ ಪೂಜಾರಿ ವಂದಿಸಿದರು.

