ಬೈಂದೂರು ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಸಂಖ್ಯೆ ಹೆಚ್ಚಾಗಿ ಈ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಬಂದಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಕ್ಷಿಪ್ರಗತಿಯಲ್ಲಿ ನಾಗರಿಕ ಸೇವೆಗಳು ಆಗಬೇಕು ಆದರೆ ಅದು ಸರಿಯಾಗಿ ಜನಸಾಮಾನ್ಯರಿಗೆ ಸರಿಯಾದ ಸಮಯದಲ್ಲಿ ದೊರೆಯಬೇಕಾಗಿರುವ ಕಚೇರಿಯಲ್ಲಿ ವಿಳಂಬವಾಗುತ್ತಿದೆ ಮತ್ತು ದಲ್ಲಾಳಿಗಳ ಸಂಖ್ಯೆ ಹೆಚ್ಚಾಗಿದೆ. ತಕ್ಷಣ ಈ ದಲ್ಲಾಳಿಗಳ ಹಾವಳಿ ತಡೆಗಟ್ಟಿ ಎಂದು ಶಾಸಕ ಗುರುರಾಜ್ ಗಂಟಿಹೊಳೆ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಸೋಮವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲ್ಲಿಯ ತಾಲೂಕು ಆಡಳಿತ ಕಚೇರಿಯ ಸಂಬಂಧ ಪಟ್ಟಂತೆ ಸುಮಾರು 441 ದೂರುಗಳು ಇದ್ದು, ಇದರಲ್ಲಿ 94 ಸಿ ಯೋಜನೆ ಅಡಿ ಅರ್ಹತೆ ಹೊಂದಿದವರಿಗೂ ಹಕ್ಕುಪತ್ರ ನೀಡಲು ಸತಾಯಿಸುತ್ತಿದ್ದಾರೆ.
ಇಲ್ಲಿನ ಸಿಬ್ಬಂದಿಗಳು ಬ್ರೋಕರ್ಗಳಿಗೆ ತಾಲೂಕ ಕಚೇರಿ ಎಲ್ಲ ದಾಖಲೆಯ ಕಡತಗಳನ್ನು ನೀಡುತ್ತಿದ್ದಾರೆ ಎಂದು ಕೆಡಿಪಿ ಸದಸ್ಯರು ದೂರಿದರು, ಹಾಗೆಯೇ ಸಾರ್ವಜನಿಕರ ಕೆಲಸದ ಬಗ್ಗೆ ಮಾಹಿತಿ ಪಡೆಯಲು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದಾಗ ತಹಶೀಲ್ದಾರರು ಅಗೌರವ ತೋರಿ ಬೆದರಿಸಿದ್ದಾರೆ ಎಂದು ಕೆಡಿಪಿ ಸದಸ್ಯ ಒಬ್ಬರು ಆಕ್ರೋಶ ವ್ಯಕ್ತಪಡಿಸಿದರು. ಹಾಗೆ ಈ ಎಲ್ಲಾ ಪ್ರಕರಣಗಳಿಗೆ ಪ್ರತಿಕ್ರಿಸಿದ ಶಾಸಕರು ಸರಿಯಾದ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಹಾಗೆ ಶಾಸಕರು ಕುಂದಾಪುರ ತಾಲೂಕು ಆಸ್ಪತ್ರೆ ವೈದ್ಯರೊಬ್ಬರು ರೋಗಿಗಳಿಂದ ಲಂಚ ಸ್ವೀಕರಿಸುತ್ತಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರುತನಿಗೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು. ಹಾಗೆ ಸಭೆಯಲ್ಲಿ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚನೆ ನೀಡಿ, ತಾಲೂಕು ವ್ಯಾಪ್ತಿಯ ಎಲ್ಲ ಕಿಂಡಿ ಅಣೆಕಟ್ಟುಗಳಿಗೆ ಸಮಯಕ್ಕೆ ಸರಿಯಾಗಿ ಹಲಗೆ ಜೋಡಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು, ಹಾಗೆ ಶಾಸಕರು ನೀರು ಸೋರಿಕೆಯಾಗುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಹಾಗೆಯೇ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕು ಮತ್ತು ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡಂತಹ ಎಲ್ಲ ಗ್ರಾಮಾಂತರ ಸಾರಿಗೆಯನ್ನು ಪುನಾರಂಬಿಸಲು ಕ್ರಮ ಕೈಗೊಳ್ಳುವಂತೆ ಕೆಎಸ್ಆರ್ ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ, ಕೆಡಿಪಿ ಸದಸ್ಯರಾದ ಮೌಲಾನ ದಸ್ತಗೀರ್ ಸಾಹೇಬ್, ಶೇಖರ್ ಪೂಜಾರಿ, ನರಸಿಂಹ ಹಳಗೇರಿ, ಜಗದೀಶ ದೇವಾಡಿಗ, ಗ್ರೀಷ್ಮಾ ಬಿಢೆ, ತಹಶೀಲ್ದಾರ ಎಸ್ ರಾಮಚಂದ್ರಪ್ಪ, ತಾಲೂಕು ಪಂಚಾಯತ್ ಆಡಳಿತಾಧಿಕಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

