ಬೈಂದೂರು ಕ್ಷೇತ್ರದ ಭವಿಷ್ಯದ ಹಿತದೃಷ್ಟಿಯಿಂದ ಜಾಗತಿಕ ಮಟ್ಟದ ಅಭಿವೃದ್ಧಿ,ಒಗ್ಗೂಡಿಸುವುದಕ್ಕಾಗಿ ಹಾಗೂ ಕ್ಷೇತ್ರದ ಪ್ರವಾಸೋದ್ಯಮ ಅವಕಾಶಗಳನ್ನು ಪರಿಚಯಿಸಲು ಹಾಗೂ ಬೈಂದೂರಿನತ್ತ ಜಾಗತಿಕ ಮಟ್ಟದ ಹೂಡಿಕೆದಾರರನ್ನು ಆಕರ್ಷಿಸಿವುದು ,ಕ್ಷೇತ್ರದ ಸಾಂಸ್ಕೃತಿಕ ವೇದಿಕೆ ಮೂಲಕ ಸಮಗೃ ಅಭಿವೃದ್ಧಿ ಪರಿಕಲ್ಪನೆಯ ಉದ್ದೇಶದಿಂದ ಸಮೃದ್ದ ಬೈಂದೂರು ಸಹಿತ ವಿವಿಧ ಸಂಘ, ಸಂಸ್ಥೆಗಳು ಹಾಗೂ ಬೈಂದೂರು ತಾಲೂಕು ಆಡಳಿತ ಸಹಭಾಗಿತ್ವದಲ್ಲಿ ಎರಡನೇ ವರ್ಷದ ಬೈಂದೂರು ಉತ್ಸವ ಜನವರಿ ಮೊದಲ ವಾರದಲ್ಲಿ ನಡೆಯಲಿದೆ ಎಂದು ಉಪ್ಪುಂದ ಕಾರ್ಯಕರ್ತ ಕಚೇರಿಯಲ್ಲಿ ಶಾಸಕ ಗುರುರಾಜ ಗಂಟಿಹೊಳೆ ಮಾಹಿತಿ ನೀಡಿದರು.
ಬೈಂದೂರು ಉತ್ಸವದಲ್ಲಿ ಈ ಬಾರಿ ಉದ್ಯೋಗ, ಆರೋಗ್ಯ, ಕೃಷಿ, ಆಹಾರ, ವಿಜ್ಞಾನ, ಕರಕುಶಲ, ಶಿಕ್ಷಣ ಮೇಳ, ಸಂಜೀವಿನಿ ಸಂಘದ ಗ್ರಾಮೀಣ ಸಂತೆ, ಕಂಬಳೋತ್ಸವ, ಸನಾತನ ಶಸ್ತ್ರ ಹಾಗೂ ಶಾಸ್ತ್ರದ ಮಾಹಿತಿ, ಸೋಮೇಶ್ವರದಲ್ಲಿ ಬೀಚ್ ಉತ್ಸವ, ಕರಾವಳಿಯ ಖಾದ್ಯಗಳು, ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಪ್ರಮುಖ ಆಕರ್ಷಣೆಯಾಗಿರಲಿವೆ. ಜತೆಗೆ ಬ್ಯಾಂಕಿಂಗ್, ಕೈಗಾರಿಕೆ, ಪ್ರವಾಸೋದ್ಯಮ, ಸಹಕಾರಿ ಕ್ಷೇತ್ರ ಸೇರಿದಂತೆ ವಿವಿಧ ಗೋಷ್ಠಿಗಳು, ರಂಗಗೀತೆ, ನೃತ್ಯೋತ್ಸವ, ಗಾನಲೋಕ, ಜಾದೂಲೋಕ, ಯೋಗ, ಭರತನಾಟ್ಯ, ಗೆಜ್ಜೆನಾದ, ಜಾಂಬೂರಿ, ಟ್ಯಾಬ್ಲೊ ಮೇಳ, ದೇಹದಾರ್ಢ ಪ್ರದರ್ಶನ, ನಾದನೂಪುರ, ಕಾರ್ಟೂನ್ ಹಬ್ಬ, ಮನೋರಂಜನಾ ಪಾರ್ಕ್, ಜನಪದ ಹಬ್ಬ, ಗೋಪೂಜೆ, ದೀಪ ವೈಭವ, ಸ್ಕೂಬಾ ಡೈವ್ ಆಯೋಜಿಸಲಾಗಿದೆ ಎಂದರು.
ಕಂಬಳ ಕ್ಷೇತ್ರದ ಅನುಭವಿ ಹಾಗೂ ಇತ್ತೀಚಿಗೆ ಬೈಂದೂರು ತಾಲೂಕು ಕಂಬಳ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಸಸಿಹಿತ್ಲು ಮಂಜು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ, ನಿರ್ದೇಶಕ ಯು.ಪಾಂಡುರಂಗ ಪಡಿಯಾರ್, ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ಉಪ್ಪುಂದ ಗ್ರಾಪಂ ಅಧ್ಯಕ್ಷ ಮೋಹನಚಂದ್ರ, ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷ ಶೇಖರ ಖಾರ್ವಿ, ನಿವೃತ್ತ ಯೋಧ ಬಿ.ಚಂದ್ರಶೇಖರ ನಾವಡ, ಸಂಜೀವಿನಿ ಒಕ್ಕೂಟ ತಾಲೂಕು ಅಧ್ಯಕ್ಷೆ ಗೀತಾ, ಸುರೇಶ ಬಟವಾಡಿ, ಪುಷ್ಪರಾಜ ಶೆಟ್ಟಿ, ಶ್ಯಾಮಲಾ ಕುಂದರ್, ಜಗನ್ನಾಥ ಉಪ್ಪುಂದ, ಸವಿತಾ ದಿನೇಶ್, ಸಂದೇಶ ಭಟ್ ಮೊದಲಾದವರು ಇದ್ದರು. ಉತ್ಸವದ ಸಂಚಾಲಕ ಶ್ರೀಗಣೇಶ ಗಾಣಿಗ ಕಾರ್ಯಕ್ರಮ ನಿರೂಪಿಸಿದರು

