ಬೈಂದೂರು :ದೇವರ ನಾಮಸ್ಮರಣೆಯಿಂದ ಸರ್ವರಿಗೂ ಒಳಿತಾಗುತ್ತದೆ. ಸನಾತನ ಧರ್ಮದ ಉಳಿವಿಗೆ ದೇವಾಲಯಗಳ ಪಾತ್ರ ದೊಡ್ಡದು. ದೇವಾಲಯಗಳು ಸಗುಣೋಪಾಸನೆ ಮಾಡುವ ಪವಿತ್ರಸ್ಥಳ. ವಿಭಿನ್ನಹೆಸರುಗಳಿಂದ ಗುರುತಿಸುವ ದೇವರು ಎಲ್ಲವನ್ನು ಮೀರಿದ ಶಕ್ತಿ. ಎಂದು ಯುಬಿಎಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯು. ಬಿ. ಶೆಟ್ಟಿ ಹೇಳಿದರು.

ವತ್ತಿನೆಣೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಗುರುವಾರ ತಮ್ಮ ಯುಬಿಎಸ್ ಟ್ರಸ್ಟಿನ ವತಿಯಿಂದ ಸೇವಾರ್ಥವಾಗಿ ನಿರ್ಮಿಸಿಕೊಡುವ ನೂತನ ಸ್ವಾಗತ ಮಹಾದ್ವಾರದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಚಾರಿತ್ರಿಕ ಇತಿಹಾಸವುಳ್ಳ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ ಪ್ರಸ್ತುತ ಗತ ವೈಭವಕ್ಕೆ ಮರಳಿದೆ. ಯಾವುದೇ ಕಾರ್ಯಗಳನ್ನು ಮಾಡುವಾಗ ಸಾಕಷ್ಟು ಅಡ್ಡಿ
ಆತಂಕಗಳು ಬರುವುದು ಸಹಜ. ಆದರೆ ಎಲ್ಲರ ದುಖಃಗಳನ್ನು ದೂರ ಮಾಡುವ ಗುರುರಾಯರು, ಭಕ್ತರ ಪ್ರಾರ್ಥನೆಯಂತೆ ಹಾಗೂ ಸಮಿತಿಯವರ ಆಶಯದಂತೆ ಎಲ್ಲಾ ಅಡಚಣೆಗಳನ್ನು ದೂರಮಾಡಿ ದೇವಳದ ಎದುರು ಸುಂದರವಾದ ರಾಜಗೋಪುರ ನಿರ್ಮಾಣವಾಗಲಿದೆ ಎಂದರು.

ಬೆಳಿಗ್ಗೆ ರಾಯರ ಸನ್ನಿಧಿಯಲ್ಲಿ ರಾಘವೇಂದ್ರ ಸ್ವಾಮಿ ಮಠದ ಅರ್ಚಕರಾದ ಸುಬ್ರಾಯ ನಾವಡ ಹಾಗೂ ಮುರುಳಿ ನಾವಡ ಇವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಿತು. ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ ಟ್ರಸ್ಟ್ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ, ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಎಸ್. ನಾಗಯ್ಯ ಶೆಟ್ಟಿ ಹೊಸ್ಮನೆ, ಸೇವಾ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಹಾಜರಿದ್ದರು.

