ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಪ್ರಸಾದ್ ಯೋಜನೆಯಡಿ ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ನಿರ್ಮಾಣಕ್ಕೆ 2,150 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಪೂರ್ವಸಿದ್ಧತೆ ನಡೆದಿದೆ. ಬೆಂಗಳೂರಿನ ಎನ್ಎಚ್ಎಲ್ಎಂಎಲ್ ಸಂಸ್ಥೆಗೆ 21 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಪಿಆರ್ ತಯಾರಿಯ ಹೊಣೆ ವಹಿಸಲಾಗಿದ್ದು, ಕೊಲ್ಲೂರು ಸೇರಿದಂತೆ ಹಲವು ದೇವಳಗಳ ಅಭಿವೃದ್ಧಿ, ಪ್ರವಾಸಿ ತಾಣಗಳ ನಿರ್ಮಾಣ ಈ ಯೋಜನೆಯ ಭಾಗವಾಗಿದೆ.
ಪ್ರವಾಸೋದ್ಯಮ ಇಲಾಖೆಯು 2024ರ ಅಕ್ಟೋಬರ್ 30ರಂದು ವಿಸ್ತೃತ ಯೋಜನಾ ವರದಿ ತಯಾರಿ ನಿಟ್ಟಿನಲ್ಲಿ ಪತ್ರ ಬರೆದಿತ್ತು. ಆದರೆ ಉಡುಪಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಡಿಪಿಆರ್ ತಯಾರಿ ವೆಚ್ಚ ಭರಿಸಲು ಹಿಂದೇಟು ಹಾಕಿತ್ತು. ಉಡುಪಿ ಜಿಲ್ಲಾಧಿಕಾರಿ 2024ರ ಡಿಸೆಂಬರ್ 10ರಂದು ಪ್ರವಾಸೋದ್ಯಮ ಇಲಾಖೆ ಕೇಂದ್ರ ಕಚೇರಿಯೇ ವಿಸ್ತೃತ ಯೋಜನಾ ವರದಿ ತಯಾರಿಗೆ 21 ಕೋಟಿ ರೂ. ಬಿಡುಗಡೆ ಮಾಡಲು ಪತ್ರ ಬರೆದಿದ್ದರು. ಬಳಿಕ ಯಾವುದೇ ಪ್ರಗತಿಯಾಗಿರಲಿಲ್ಲ.
ಈಗ ಪ್ರವಾಸೋದ್ಯಮ ಇಲಾಖೆಯೇ ಏಜೆನ್ಸಿ ಗೊತ್ತು ಮಾಡಿ ಅರ್ಹ ಸಂಸ್ಥೆಗೆ ವಿಸ್ತೃತ ಯೋಜನಾ ವರದಿ ತಯಾರಿಯ ಹೊಣೆ ವಹಿಸಿದೆ. ಶೀಘ್ರವೇ ಬೆಂಗಳೂರಿನ ನ್ಯಾಷನಲ್ ಹೈವೇ ಲಾಜಿಸ್ಟಿಕ್ ಮ್ಯಾನೇಜ್ಮೆಂಟ್ ಲಿಮಿಟೆಡ್ ಸಂಸ್ಥೆ ಕಾರ್ಯಪ್ರವೃತ್ತವಾಗಲಿದೆ.
ಏನೇನು ಅಭಿವೃದ್ಧಿ?
ಮೂಕಾಂಬಿಕಾ ರೋಡ್ ಬೈಂದೂರು ರೈಲ್ವೆ ಸ್ಟೇಷನ್
ಮೂಕಾಂಬಿಕಾ ಹೆಲಿಪ್ಯಾಡ್ ನಿರ್ಮಾಣ
2 – 3 ವಾಟರ್ ಫಾಲ್ಸ್
ಮರವಂತೆ ಬೀಚ್ (ಪ್ರವಾಸೋದ್ಯಮ ಇಲಾಖೆಯ 15 ಎಕರೆ)
ಬ್ಯಾಕ್ ವಾಟರ್
ನದಿ ದಂಡೆ ಸಂರಕ್ಷಣೆ
ದೇವಳಗಳ ಅಭಿವೃದ್ಧಿ ಪರ್ವ
ಮರವಂತೆ ವರಾಹ ಸ್ವಾಮಿ
ಮಾರಣಕಟ್ಟೆ ಶ್ರೀಬ್ರಹ್ಮಲಿಂಗೇಶ್ವರ
ಕೆರಾಡಿ ಮೂಡುಗಲ್ಲು ಕೇಶವನಾಥ
ಬೈಂದೂರು ಸೋಮೇಶ್ವರ
ಕೊಲ್ಲೂರು ಮೂಕಾಂಬಿಕಾ
ಪ್ರವಾಸಿ ತಾಣಗಳ ಜತೆಗೆ ಪ್ರಸಾದ್ ಯೋಜನೆಯಡಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಮೂಲಕ ಪ್ರವಾಸಿಗರ ಆಕರ್ಷಣೆ, ಉದ್ಯೋಗ ಸೃಷ್ಟಿ ಜತೆಗೆ 2,150 ಕೋಟಿ ರೂ. ಯೋಜನೆ ಜಿಲ್ಲೆಯ ಆರ್ಥಿಕತೆಗೂ ಪೂರಕವಾಗಲಿದೆ ಎಂದು ಮಣಿಪಾಲದ ರಜತಾದ್ರಿಯಲ್ಲಿರುವ ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ವಿಂಧ್ಯಾ ಹೇಳಿದ್ದಾರೆ.

